ಅವೈಜ್ಞಾನಿಕ ಕೃಷಿ ಪದ್ಧತಿ ತುಂಬಿ ತುಳುಕುತ್ತಿರುವ ಹಿನ್ನೆಲೆ, ಕೃಷಿ ಚಟುವಟಿಕೆ ರಾಸಾಯನಿಕ ಕೃಷಿಯಲ್ಲಿ ಮಿಂದೇಳುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿಕನೋರ್ವನಿಗೆ ಕೃಷಿ ಭೂಮಿ ಮತ್ತು ಬೆಳೆಗಳನ್ನ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಯಿತು. ಕೃಷಿಕ ಸಾವಯವ ಕೃಷಿಯ ಮಾಹಿತಿ ಪಡೆದು ಸಾವಯವಕ್ಕೆ ಎಂಟ್ರಿ ಕೊಡಲು ಸಜ್ಜಾದ್ರು, ಆಗ ಅವರಿಗೆ ಕಾಡಿದ ವಿಘ್ನಗಳು ನೂರೆಂಟು.
ಗ್ರಾಮದ ಜನ, ಕುಟುಂಬದವರು ಎಲ್ಲರ ಬಾಯಲ್ಲಿ ಬರುವ ಮಾತು ರಾಸಾಯನಿಕವಿಲ್ಲದೆ ಬೆಳೆ ಇಲ್ಲ, ಸಾವಯವ ಬೇಡ ನಷ್ಟಕ್ಕೀಡಾಗಬೇಕಾಗುತ್ತದೆ ಎಂದು ದಿಕ್ಕತಪ್ಪಿಸುವ ಮಾತುಗಳು. ಆದ್ರೆ ಕೃಷಿಕ ಗಿರೀಶ್ ಮಾತ್ರ ಯಾವುದೇ ಮಾತಿಗೆ ಕಿವಿಗೊಡದೆ, ಸಾವಯವದಲ್ಲಿ ಹೆಸರು ಮತ್ತು ಹಲಸಂದಿ ಬೆಳೆಯಲು ಮುಂದಾದ್ರು. ಇಂತಹದೊಂದು ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಮಾರುತಿನಗರ ಗ್ರಾಮದಲ್ಲಿ.
ಸಾವಯವದಲ್ಲಿ ನಿರ್ವಹಣೆ:
ರಾಸಾಯನಿಕದಲ್ಲಿ ಬೆಳೆಗಳಿಗೆ ಉಪಚಾರ ಮತ್ತು ಸಾವಯವದಲ್ಲಿ ಉಪಚಾರಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಈ ಮಾತು ಪರಿಣಾಮದಲ್ಲಿಯೂ ಹೊರತಾಗಿಲ್ಲ.
ಮೊದಲನೆಯದಾಗಿ ಕೃಷಿಕನ ಬೇಸಾಯ ಕ್ರಮ ಖುಷ್ಕಿ ಬೇಸಾಯ. ಹೀಗಾಗಿ ಕೃಷಿಕ ಮುಂಗಾರು ಆರಂಭದಲ್ಲಿ ಭೂಮಿಯನ್ನ ಚೆನ್ನಾಗಿ ಉಳುಮೆ ಮಾಡಿಕೊಂಡು ಸಾವಯವ ಕೃಷಿಯಲ್ಲಿ ಬೀಜೋಪಚಾರ ಕ್ರಮಗಳನ್ನ ಅಳವಡಿಸಿಕೊಂಡು ಸಾವಯವ ಕೃಷಿಗೆ ಪದಾರ್ಪಣೆ ಮಾಡಿದ್ರು. ನಂತರ ಬೆಳೆಗಳಿಗೆ ನೀಡಬೇಕಾದ ಪೋಷಕಾಂಶಗಳನ್ನ ಸಾವಯವ ಕೃಷಿಯ ಮೂಲಕ ಕೊಟ್ಟು, ಹೆಚ್ಚಿನ ಇಳುವರಿಗೆ ಮಣೆಹಾಕಿದ್ರು.
ಫಲಿತಾಂಶ:
ಹಲಸಂದಿ ಮತ್ತು ಹೆಸರು ಬೆಳೆಗಳು ಮೂರು ತಿಂಗಳ ಪ್ರಯಾಣವನ್ನ ನೆಮ್ಮದಿಯಿಂದ ಪೂರ್ಣಗೊಳಿಸಿದ್ವು. ಅದು ಹೇಗೆಂದರೆ ಕಟಾವಿನ ಹಂತದಲ್ಲಿ ಹಸಿರು ಬಣ್ಣ ಕಡಿಮೆಯಾಗಿಲ್ಲ, ಹಳದಿ ಬಣ್ಣಕ್ಕೆ ಜಾಗ ಇಲ್ಲ. ಗಿಡದ ತುಂಬೆಲ್ಲಾ ಸದೃಢ ಕಾಯಿಗಳು. ಇದರ ಜತೆಗೆ ಭೂಮಿಯನ್ನ ಮುಟ್ಟಿದರೆ ಮಲ್ಲಿಗೆ ಮುಟ್ಟಿದಂತಹ ಸಂಭ್ರಮ. ಎಲ್ಲೆಂದರಲ್ಲಿ ಎರೆಹುಳು, ಸೂಕ್ಷ್ಮಾಣು ಜೀವಾಣುಗಳ ಖಜಾನೆ. ಈ ದೃಶ್ಯವನ್ನ ಸ್ವತ: ಕೃಷಿಕ ನೋಡಿ ಅನುಭವಿಸಿದಾಗ ಕೃಷಿಕನಲ್ಲಿ ಬೆಳೆ ಮತ್ತು ಭೂಮಿಯನ್ನ ಉಳಿಸಿಕೊಂಡಿರುವ ಸಾರ್ಥಕ ಮನೋಭಾವನೆ ತುಂಬಿತ್ತು.
ಒಟ್ಟಿನಲ್ಲಿ ಕೃಷಿಕರು ಸಾವಯವದಲ್ಲಿ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ. ಆದ್ರೆ ಒಳ್ಳೆ ಕೆಲಸಕ್ಕೆ ಮುಂದಾಗುತ್ತಿರುವರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡದೆ, ಧೈರ್ಯ ತುಂಬಬೇಕಿದೆ.
ಕೃಷಿಕನ ನೇರ ಸಂದರ್ಶನ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=dQ-Urz3GTaw