Blog

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳ ಗ್ರಾಮದ ಕೃಷಿಕರಾದ ಮಂಜುನಾಥ ಅವರು, ಕಳೆದ ವರ್ಷ(2020)ಕಬ್ಬು ಬೆಳೆಯಲು ಮುಂದಾದ್ರು. ಅದೂ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿಯಲ್ಲಿ ಬೆಳೆದಿದ್ದರಿಂದ ಬೆಳೆ ಪ್ರಥಮ ಬಾರಿ ಕರೆಗೆ 40 ಟನ್ ಇಳುವರಿ ನೀಡಿತ್ತು. ಈ ವರ್ಷ(2021) 35ಕ್ಕಿಂತ ಹೆಚ್ಚು ಮರಿಗಳನ್ನು ಹೊಂದಿದ್ದು, 15ರಿಂದ 20 ಗಣಿಕೆಗಳನ್ನ ಒಳಗೊಂಡು 60 ಟನ್ ಗಿಂತ ಹೆಚ್ಚು ಇಳುವರಿ ನಿರೀಕ್ಷೆ ಮೂಡಿಸಿದೆ. ಇಂತಹ ಬದಲಾವಣೆಗೆ ಕಾರಣ  ಸಾವಯವ ಕೃಷಿ.

ಕಬ್ಬು ಬೆಳೆಯ ಮಧ್ಯ ಸೂಕ್ತ ಅಂತರ..!

ಕೃಷಿಕ ಮಂಜುನಾಥ ಅವರು, ಕಬ್ಬು ಬೆಳೆಯ ಮಧ್ಯ ಸಾಲಿನಿಂದ ಸಾಲಿಗೆಎಂಟು ಅಡಿ ಅಂತರ ಕಾಯ್ದುಕೊಂಡಿದ್ದರಿಂದ ಕಬ್ಬು ಬೆಳೆಗೆ ಸೂಕ್ತವಾದ ಗಾಳಿ, ಬೆಳಕುಮತ್ತು ಸಮಗ್ರ ಪೋಷಕಾಂಶ ದೊರೆಯುತ್ತಿದೆ. ಹೀಗಾಗಿ ಬೆಳೆ ಬಂಪರ್ ಇಳುವರಿಯ ನಿರೀಕ್ಷೆ ಮೂಡಿಸಿದೆ.

ಒಂದುವೇಳೆ ಕೃಷಿಕರು ಕಬ್ಬು ಬೆಳೆಯ ಮಧ್ಯ ಕಡಿಮೆ ಅಂತರ ನೀಡಿದರೆ, ಬೆಳೆಗೆ ಗಾಳಿ, ಬೆಳಕು ಸರಿಯಾಗಿ ಸಿಗದೆ, ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆಗ ಕೃಷಿಕರು ಹಾಕಿದ ಬಂಡವಾಳಕ್ಕಿಂತ ಕಡಿಮೆ ಇಳುವರಿ ಪಡೆಯುವಂತಹ ಸಂದರ್ಭ ಎದುರಾಗುತ್ತದೆ.

ಮಣ್ಣಿಗೆ ಕಬ್ಬಿನ ರೌದಿ ಹೋದಿಕೆ..!

ಕೃಷಿ ಭೂಮಿಯ ಮೇಲೆ ಸೂರ್ಯನ ಬಿಸಿಲುನೇರವಾಗಿ ಬೀಳುವುದರಿಂದ, ಮಣ್ಣಿನಲ್ಲಿದ್ದ ತೇವಾಂಶ ಆವಿಯಾಗುಗುತ್ತದೆ. ಹಾಗೆಯೇ ಮಣ್ಣಿನಲ್ಲಿ ಅಡಗಿರುವ ಎರೆಹುಳು ಮತ್ತು ಉಪಕಾರಿ ಸೂಕ್ಷ್ಮಾಣು ಜೀವಿಗಳು ಸೂರ್ಯನ ಉರಿ ಬಿಸಿಲು ತಡೆದುಕೊಳ್ಳದ ಕಾರಣ, ಜೀವಿಗಳ ಸಂತತಿ ಕ್ಷೀಣಿಸುತ್ತದೆ. ಇದರಿಂದಾಗಿ ಜೈವಿಕ ಕ್ರಿಯೆ ಮಾಯವಾಗಿ ಭೂಮಿ ಬರಡಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಇಂತಹ ಸಂದರ್ಭದಲ್ಲಿ ಕೃಷಿಕರು ಕಸದಿಂದ ರಸ ಎಂಬ ಗಾದೆಯಂತೆ, ಕಬ್ಬಿನ ರೌದಿಯನ್ನ ಭೂಮಿಯ ಮೆಲ್ಭಾಗದಲ್ಲಿ ಹೊದಿಕೆ ಮಾಡಿದರೆ, ತೇವಾಂಶವು ಉಳಿಯುತ್ತದೆ, ಜೈವಿಕ ಕ್ರಿಯೆ ಮತ್ತಷ್ಟು ಚುರುಕುಗೊಳ್ಳುತ್ತದೆ.

ಸಾವಯವ ಕೃಷಿಯಲ್ಲಿ ಕಬ್ಬು..!

ಕೃಷಿಕರು ಕಬ್ಬು ಬೆಳೆಗೆ ರಾಸಾಯನಿಕ ಗೊಬ್ಬರ ಒಂದೇ ಮದ್ದು ಎಂದು ಕೂರದೆ ಸಾವಯವ ಕೃಷಿಯನ್ನೊಮ್ಮೆ ತಿರುಗಿ ನೋಡಿದರೆ, ಕೃಷಿ ಭೂಮಿ ಫಲವತ್ತಾಗುತ್ತದೆ, ಬೆಳೆಗೆ ಸಮಗ್ರ ಪೋಷಕಾಂಶ ಸೀಗುತ್ತದೆ. ಆಗ ಕೃಷಿಕರಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಇಳುವರಿ ಪಡೆಯಲು ಸುಲಭವಾಗುತ್ತದೆ.

ಹೌದು.. ರಾಸಾಯನಿಕ ಕೃಷಿಯಿಂದ ಕೃಷಿ ಭೂಮಿ ತನ್ನ ಜೈವಿಕ ಗುಣ, ಭೌತಿಕ ಗುಣ, ರಾಸಾಯನಿಕ ಗುಣವನ್ನ ಕಳೆದುಕೊಂಡು ಬೆಳೆಗೆ ಅಗತ್ಯ ಪೋಷಕಾಂಶ ನೀಡಲು ಶಕ್ತವಾಗುವುದಿಲ್ಲ. ಅದೇ ಸಾವಯವ ಕೃಷಿಯಲ್ಲಿ ಕಬ್ಬು ಬೆಳೆ ಬೆಳೆದರೆ, ಬೆಳೆಗೆ ಪೋಷಕಾಂಶಗಳ ಕೊರತೆಯಾಗದೆ, ಕೃಷಿ ಭೂಮಿ ಫಲವತ್ತಾಗುತ್ತದೆ.

ವರದಿ: ಶ್ವೇತಾ ಕಲಕಣಿ

 

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=WPm_IJa5aPU&t=14s

 

 

 

 



Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India